ಸಮಸ್ಯೆಯ ಸಮಸ್ಯೆ
ಒಬ್ಬ ತಾಯಿ ತನ್ನ ಸತ್ತ ಮಗುವನ್ನು ಬದುಕಿಸಿಕೊಡಲು ಬೇಡಿಕೊಂಡಾಗ, ಭಗವಾನ್ ಬುದ್ಧ 'ಸಾವಿಲ್ಲದ ಮನೆಯ ಸಾಸಿವೆ ತಾ' ಎಂದು ಹೇಳಿದ ಕಥೆ ನಾವೆಲ್ಲಾ ಕೇಳಿರಲು ಸಾಕು. ಆ ಕಥೆಯ ತಾತ್ಪರ್ಯವಿಷ್ಟೇ, ಹುಟ್ಟಿದವರೆಲ್ಲರೂ ಸಾಯುವುದು ನಿಶ್ಚಿತ. ಅದಕ್ಕಾಗಿ ದುಃಖ ಪಡುವ ಅಗತ್ಯವಿಲ್ಲ ಎಂದು. ಈಗ ಯಾರು ಮೃತಪಟ್ಟರು ಅಥವಾ ಸಾಯಲು ಹೊರಟಿದ್ದಾರೆ ? ಇದೇನು ಈಗ ನಾನು ಸಾವಿನ ವಿಷಯದ ಬಗ್ಗೆ ಮಾತನಾಡುತ್ತಿರುವೆ ಅಂತ ಅಂದುಕೊಂಡಿರಾ... ಇದೇ ನೋಡಿ ಸಮಸ್ಯೆ. ನಾವು ಸಾಮಾನ್ಯವಾಗಿ ವಾಸ್ತವವನ್ನು ಅಥವಾ ಸತ್ಯವನ್ನು ಎದುರಿಸುವುದರಿಂದ ವಿಮುಖರಾಗುವುದು ಅಥವಾ ಪಲಾಯನ ಮಾಡುವುದು ಅಲ್ಲವೇ? ಇರಲಿ, ಆ ಮೇಲಿನ ಗೌತಮ ಬುದ್ಧನ ಕಥೆಯನ್ನು ಇಂದಿನ ದಿನಮಾನಗಳಿಗನುಸಾರವಾಗಿ ಹೇಳುವುದಾದರೆ... ತನ್ನ ಮಕ್ಕಳು ಯಾವಾಗಲೂ ಮೊಬೈಲನಲ್ಲೇ ಕಾಲ ಕಳೆಯುತ್ತಾರೆ. ಇದೊಂದು ಸಮಸ್ಯೆಯಾಗಿದೆ. ಹೇಗಾದರೂ ಮಾಡಿ ಈ ಸಮಸ್ಯೆಯಿಂದ ಮಕ್ಕಳನ್ನು ಹೊರತರುವ ಉಪಾಯವನ್ನು ಹೇಳು ಎಂದು ಒಬ್ಬ ತಾಯಿ ಇಂದಿನ ಬುದ್ಧು ಗೂಗಲ್ ಗುರುವಿಗೋ ಅಥವಾ ಏಐಗೋ ಕೇಳಿದರೆ, ಅದರಿಂದ ಥಟ್ಟನೇ ಬರುವ ಉತ್ತರ 'ಸಮಸ್ಯೆ ಇಲ್ಲದ ಮನೆಯ ಸಾಮಾನು ತಾ' ಎಂದು.!!! ಎಲ್ಲರ ಮನೆಯ ದೋಸೆಗೂ ತೂತು ಎಂಬಂತೆ ಎಲ್ಲರ ಮನೆಯಲ್ಲಿ ಸಮಸ್ಯೆಗಳೇ ಸಮಸ್ಯೆಗಳು. ಹಾಗೆ ನೋಡಿದರೆ, ನಾವು ಸಮಸ್ಯೆಗಳಲ್ಲಿಯೇ ಹುಟ್ಟಿ, ಸಮಸ್ಯೆಗಳಲ್ಲಿಯೇ ಜೀವಿಸಿ, ಕೊನೆಗೆ ಸಮಸ್ಯೆಗಳೊಟ್ಟಿಗೇ ಸಾಯುವುದು. ಅಲ್ಲಲ್ಲಾ... ಬಹುಶಃ ನಾವು ಹುಟ್ಟುತ್ತೇವೆ ಎಂ...