ಖಂಡೇ ನವಮಿಯ ಆಯುಧ ಪೂಜೆ



ನವರಾತ್ರಿಯ ಖಂಡೆ ನವಮಿ ಆಯುಧ ಪೂಜೆಯ ದಿನ.ಇಂದಿನ ದಿನ ಎಲ್ಲರೂ ತಮ್ಮ ತಮ್ಮ ಕಸುಬು, ಉದ್ಯೋಗದಲ್ಲಿ ಬಳಸುವ ವಿವಿಧ ಆಯುಧಗಳ ಪೂಜೆ ಮಾಡಿ ಅವುಗಳಿಗೆ ಗೌರವ ತೋರಿಸುವುದು ಒಂದು ಧಾರ್ಮಿಕ ವಾಡಿಕೆ.

ನಮ್ಮ ಮನೆತನದ ಕಸುಬು/ಉದ್ಯೋಗ ಶಿಕ್ಷಣ ಅಂದರೆ ಅಧ್ಯಯನ ಮತ್ತು ಅಧ್ಯಾಪನ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ನಮ್ಮ ತಂದೆಯವರು ಅಷ್ಟೇನು ಸಂಪ್ರದಾಯಸ್ಥರಲ್ಲ ಆದರೆ ನಮ್ಮ ತಾಯಿ ಸ್ವಲ್ಪ ಧಾರ್ಮಿಕ ಸ್ವಭಾವದವಳು.ಹೀಗಾಗಿ ನಮ್ಮ ಮನೆಯಲ್ಲಿ ಯಾವುದೇ ಹಬ್ಬದ ದಿನದಂದು ತಂದೆಯವರಿಂದ ದೇವರ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿರಲಿಲ್ಲ ಆದರೆ ಅಮ್ಮ ಮಾತ್ರ ಹಬ್ಬದ ಊಟಕ್ಕೆ ವಿವಿಧ ಬಗೆಯ ಭಕ್ಷ್ಯಗಳನ್ನು ಮಾಡುತ್ತಿದ್ದಳು. ಐದು ಮಕ್ಕಳಲ್ಲಿ ಯಾರೋ ಒಬ್ಬರಿಂದ ಊಟಕ್ಕೂ ಮೊದಲು ದೇವರಿಗೆ ನೈವೇದ್ಯ ಮಾಡಿಸುತ್ತಿದ್ದಳು ಮತ್ತು ಸಂದರ್ಭೋಚಿತ ಹಲವು ದಾಸರ ಪದಗಳನ್ನು ಹಾಡುತ್ತಿದ್ದಳು. ನಾವೆಲ್ಲ ಅಂದು ದೇವರಿಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಭಕ್ತಿಯಿಂದ ವಿಶೇಷವಾಗಿ ಬೇಡಿಕೊಂಡು ನಮಸ್ಕಾರ ಮಾಡಿ ಅಮ್ಮ ಮಾಡಿದ ಹಬ್ಬದ ಊಟ ಮಾಡುವುದರೊಂದಿಗೆ ನಮ್ಮ ಮನೆಯ ಹಬ್ಬದ ಆಚರಣೆ ಮುಗಿದಂತೆಯೇ ಲೆಕ್ಕ.

ಎಲ್ಲೆಡೆಯಂತೆ ನಮ್ಮ ಶಾಲೆಗೂ ವರ್ಷದಲ್ಲಿ ಎರಡು ಬಾರಿ ರಜಾದಿನಗಳು ಇರುತ್ತಿದ್ದವು. ವರ್ಷವಿಡೀ ಓದಿ ವಾರ್ಷಿಕ ಪರೀಕ್ಷೆ ಬರೆದ ನಂತರ ಬೇಸಿಗೆಯ ರಜೆ. ಆ ಸಮಯದಲ್ಲಿ ನಮ್ಮ ಗೆಳೆಯರಲ್ಲಿ ಅನೇಕರು ಪ್ರವಾಸಕ್ಕೆಂದು ಬೇರೆ ಊರಿಗೆ ಹೋಗುವವರು ಇಲ್ಲವೇ ದಿನವಿಡೀ ಮನೆಯ ಒಳಗೆ ಹೊರಗೆ ಆಟದಲ್ಲಿ ಸಮಯ ಕಳೆಯುತ್ತಿದ್ದರು.

ನಮ್ಮದು ಐದು ಮಕ್ಕಳ ದೊಡ್ಡ ಕುಟುಂಬವಾದಕಾರಣ ಒಬ್ಬರಿಗೆ ರಜೆ ಇದ್ದರೆ ಇನ್ನೊಬ್ಬರಿಗೆ ಪರೀಕ್ಷೆಯ ಸಮಯ ಅಥವಾ ತಂದೆಯವರಿಗೆ ವಿಶ್ವವಿದ್ಯಾಲಯದ ಪರೀಕ್ಷೆ ನಡೆಸುವ ಜವಾಬ್ದಾರಿ. ಹೀಗಾಗಿ ಮನೆಯ ಎಲ್ಲರೂ ಸೇರಿ ಬೇಸಿಗೆಯ ಪ್ರವಾಸಕ್ಕೆ ಹೋದ ನೆನಪಿಲ್ಲ.ಇನ್ನು ಬೇಸಿಗೆ ಕಾಲದಲ್ಲಿ ಬಂಧು ಬಳಗದವರ ಮನೆಯಲ್ಲಿ ಲಗ್ನ ಮುಂಜಿವೆಗಳಿದ್ದಾಗ ನಮ್ಮಮ್ಮ ನಮ್ಮಲ್ಲಿ ಕೆಲವು ಮಕ್ಕಳನ್ನು ಕರೆದುಕೊಂಡು ಆ ಬಂಧುಗಳಿದ್ದ ಊರಿಗೆ ಹೋಗಿ ಬರುತ್ತಿದ್ದಳು. ಹಾಗಂತ ಇತರರ ಮಕ್ಕಳಂತೆ ಬೇಸಿಗೆ ರಜೆಯಲ್ಲಿ ದಿನವಿಡೀ ಆಟದ ಭಾಗ್ಯ ನಮ್ಮ ಮನೆಯ ಮಕ್ಕಳ ಭಾಗ್ಯದಲ್ಲಿ ಇರಲಿಲ್ಲ.

ವಾರ್ಷಿಕ ಪರೀಕ್ಷೆ ಮುಗಿದ ಮರುದಿನದಿಂದ ಕೆಲವು ದಿನ ಮುಂದಿನ ತರಗತಿಯ ಪಠ್ಯ ಪುಸ್ತಕಗಳ ಸಂಗ್ರಹಿಸುವ ಕಾರ್ಯ ನಮ್ಮದಾಗಿರುತ್ತಿತ್ತು. ಅದಾದ ನಂತರ ಅವುಗಳ ಅಧ್ಯಯನ ಪ್ರಾರಂಭ. ಯಾವುದೇ ವಿಷಯ ತಿಳಿಯದಿದ್ದರೆ ಅಕ್ಕ ಅಣ್ಣಂದಿರ ಸಹಾಯ ಪಡೆಯುವುದು.ಅದೂ ಅಸಮರ್ಪಕ ಎನಿಸಿದರೆ ತಾಯಿಯ ಮಾರ್ಗದರ್ಶನ.  ಒಟ್ಟಾರೆ ಬೇಸಿಗೆಯ ರಜೆಯಲ್ಲಿ ಮುಂದಿನ ತರಗತಿಯ ಕನಿಷ್ಠ ಅರ್ಧ ಪಠ್ಯವನ್ನು ಓದಿ ಮುಗಿಸುವುದು ನಮ್ಮೆಲರಿಗಿದ್ದ ಅನಿವಾರ್ಯತೆ. ಇದಲ್ಲದೇ ನಗರದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ನಮ್ಮ ಇಷ್ಟದ ಕಥೆ,ಕಾದಂಬರಿ ಪುಸ್ತಕಗಳನ್ನು ತಂದು ಓದುವುದು ಮತ್ತು ಅವುಗಳ ವಿಶ್ಲೇಷಣೆ ನಮ್ಮ ಮನೆಯ ಸಂಪ್ರದಾಯ. ಜೊತೆಗೆ ಯಾವುದಾದರೂ ಒಂದು ಹವ್ಯಾಸದ ಮನೆಯ ಒಳಗೆ ಆಡಬಹುದಾದ ಚದುರಂಗ, ಕೇರಂ ಆಟಗಳಲ್ಲಿ ತೊಡಗಿರುವುದು ಮತ್ತು ಕೇವಲ ಸಂಜೆ ಬೇಸಿಗೆಯ ಸೂರ್ಯನ ತಾಪ ಇಳಿದ ಮೇಲೆ ಆಟಕ್ಕೆ ಹೊರಗೆ ಹೊಗಲು ಅವಕಾಶ. ಇದು ಮನೆಯ ಮಕ್ಕಳಾದ ನಾವು ವಾರ್ಷಿಕ ರಜಾ ದಿನಗಳನ್ನು ಕಳೆಯುವ ಪಧ್ಧತಿ. ನನ್ನ ಅಣ್ಣಂದಿರು, ಅಕ್ಕಂದಿರು ಬಹಳ ವಿಧೇಯತೆಯಿಂದ ಮನೆಯ ನಿಯಮದಂತೆ ಕೇವಲ ಸಂಜೆ ಮಾತ್ರ ಆಟಕ್ಕೆ ಹೋಗುವವರು. ಹೀಗಾಗಿ ನಮ್ಮ ಮನೆಯಲ್ಲಿ ಬೇಸಿಗೆಯ ರಜಾ ದಿನಗಳಲ್ಲೂ ಒಂದು ತರಹದ ಅಧ್ಯಯನದ ವಾತಾವರಣ ಇರುತ್ತಿತ್ತು. ಹಾಗಾಗಿ ನನ್ನ ಯಾವ ಗೆಳೆಯರೂ ನಮ್ಮ ಮನೆಗೆ ಆಟವಾಡಲು ಬರಲು ಧೈರ್ಯ ಮಾಡುತ್ತಿರಲಿಲ್ಲ. 

ನನಗೋ ಗೆಳೆಯರೊಂದಿಗೆ ದಿನವಿಡೀ ಆಟವಾಡುವ ಆಸೆ. ಹಾಗಾಗಿ ಮನೆಯಲ್ಲಿ ನನ್ನ ಕಾಲುಗಳು ನಿಲ್ಲುತ್ತಿರಲಿಲ್ಲ. ತಂದೆಯವರು ಬೆಳಗ್ಗೆ ವಿಶ್ವವಿದ್ಯಾಲಯಕ್ಕೆ ತೆರಳಿದರೆಂದರೆ ನಾನು ಗೆಳೆಯರ ಮನೆಗೆ ಜಿಗಿಯುತ್ತಿದ್ದೆ. ಆಟ ಊಟಗಳೆಲ್ಲ ಗೆಳೆಯರ ಮನೆಯಲ್ಲೇ, ಮತ್ತೆ ನಾನು ಮನೆ ಸೇರುವುದು ಸಂಜೆ ಮನೆಗಳಲ್ಲಿ ಲೈಟುಗಳನ್ನು ಹಚ್ಚಿದಾಗಲೇ.

ಮನೆಯಲ್ಲಿ ಚಿಕ್ಕ ಮಗನಾದ ಕಾರಣ  ನನ್ನ ಎಲ್ಲ ತುಂಟಾಟಗಳಿಗೆ ನಮ್ಮ ತಾಯಿಯ ಮೌನ ಸಮ್ಮತಿ ಇರುತ್ತಿತ್ತು. ನನ್ನ ಅಣ್ಣಂದಿರು ಅಕ್ಕಂದಿರುಗಳಿಗೂ ನನ್ನಂತೆ ದಿನವಿಡೀ ಆಟವಾಡುವ ಬಯಕೆಗಳಿದ್ದವೋ ಇಲ್ಲವೋ ಗೊತ್ತಿಲ್ಲ ಅಥವಾ ನನ್ನಂಥಹ ನಿರ್ಲಜ್ಯತೆ ಇರಲಿಲ್ಲವೇನೋ ಅಥವಾ ವಿಧೇಯತೆ ಜಾಸ್ತಿ ಇತ್ತೋ ಗೊತ್ತಿಲ್ಲ.ಅಂತೂ ಅವರಾರೂ ನನ್ನಂತೆ ಬೇಸಿಗೆಯ ರಜಾ ದಿನಗಳಲ್ಲಿ ದಿನವಿಡೀ ಹೋರಗೇ ಆಟವಾಡಿದವರಲ್ಲ. ಹಾಗಂತ ಸಂಜೆ ತಂದೆಯವರು ಮನೆಗೆ ಬಂದಾಗ ಅವರಾರೂ ನನ್ನ ಬಗ್ಗೆ ಎಂದೂ ಒಂಚೂರು ದೂರು ನೀಡಿದವರಲ್ಲ. ಹೊರತಾಗಿ ತಂದೆಯವರು ನನ್ನ ಬಗ್ಗೆ ವಿಚಾರಿಸಿದಾಗ ಒಬ್ಬರು ಒಂದು ನೆಪ ಹೇಳಿ ಇನ್ನೊಬ್ಬರು ನನ್ನನ್ನು ಹುಡುಕಲು ಗೆಳೆಯರ ಮನೆಗಳಿಗೆ ಅಲೆದಾಡುತ್ತಿದ್ದರು.

ಬೇಸಿಗೆಯ ರಜೆಯ ಕಥೆ ಹೀಗಾದರೆ ಇನ್ನು ದಸರಾ ರಜೆ ಬರುವುದು ಅರ್ಥ ವಾರ್ಷಿಕ ಪರೀಕ್ಷೆ ಯ ನಂತರ.ಆಗಂತೂ ನಮ್ಮ ಮನೆಯಲ್ಲಿನ ಅಧ್ಯಯನದ ವಾತಾವರಣ ಇನ್ನೂ ತೀವ್ರವಾಗಿರುತ್ತಿತ್ತು.ಇನ್ನೇನು ವಾರ್ಷಿಕ ಪರೀಕ್ಷೆ ಕೆಲವೇ ತಿಂಗಳುಗಳಲ್ಲಿ ಪ್ರಾರಂಭ ವಾಗುವುದು ಎಂದು ಎಲ್ಲರೂ ದಿನವಿಡೀ ಅಭ್ಯಾಸದಲ್ಲಿಯೇ ಮುಳುಗಿರುತ್ತಿದ್ದರು. ಹಾಗಿರುವಾಗ ನಾನಾದರೋ ಒಲ್ಲದ ಮನಸ್ಸಿನಿಂದ  ಮನೆಯಲ್ಲಿ ಪಠ್ಯಪುಸ್ತಕಗಳೊಂದಿಗೆ ಕಾಲ ಕಳೆಯುತ್ತಿದ್ದೆ.ಇದಕ್ಕೆ ಮುಖ್ಯ ಕಾರಣ ಒಂದು ವೇಳೆ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಮನೆಯ ಎಲ್ಲ ಮಕ್ಕಳ ಸರಾಸರಿಗಿಂತ ನನ್ನ ಫಲಿತಾಂಶ ಕಡಿಮೆ ಬಂದರೆ ತಂದೆಯವರಿಂದ ಆಗುವ ಮಂತ್ರ ಪುಷ್ಪ ಕಡಿಮೆ ಮಾಡುವಲ್ಲಿ ತಾಯಿಗೆ ಸ್ವಲ್ಪವಾದರೂ ಅನುಕೂಲವಾಗಲಿ ಎಂಬ ಅವ್ಯಕ್ತ ಬಯಕೆ. ಇಂತಹದರಲ್ಲಿ ನವರಾತ್ರಿಯ ಖಂಡೆ ನವಮಿ ಆಯುಧ ಪೂಜೆಯ ದಿನ ಬಂತೆಂದರೆ ನನಗೆ ಎಲ್ಲಿಲ್ಲದ ಸಂಭ್ರಮ. ಅಂದು ತಾಯಿಯ ಮಾರ್ಗದರ್ಶನದಲ್ಲಿ ನಮ್ಮ ಮನೆತನದ ಆಯುಧಗಳಾದ ಪುಸ್ತಕಗಳನ್ನು ದೇವರ ಮುಂದಿಟ್ಟು ಅವುಗಳ ಸಂಕ್ಷಿಪ್ತ ಪೂಜೆ ಮಾಡುವ ಮುತುವರ್ಜಿಯನ್ನು ನಾನೇ ವಹಿಸಿಕೊಳ್ಳುತ್ತಿದ್ದೆ.ಇದಕ್ಕೆ ನನ್ನ ಧಾರ್ಮಿಕ ಪ್ರವೃತ್ತಿ ಸ್ವಲ್ಪ ಕಾರಣವಾದರೆ ಮುಖ್ಯ ಕಾರಣ ಬೇರೆಯೇ. ಆಯುಧ ಪೂಜೆಗೆ ಇತರರ ಒಂದೊಂದು ಪುಸ್ತಕಗಳನ್ನು ಇಟ್ಟರೆ ನನ್ನ ಎಲ್ಲ ಪಠ್ಯ ಪುಸ್ತಕಗಳನ್ನು ಇಡುತ್ತಿದ್ದೆ.ಯಾಕೆಂದರೆ ನಾನು ಜಾಸ್ತಿಯಾಗಿ ಓದದೇ ಇದ್ದರೂ ಪಠ್ಯದ ಎಲ್ಲ ಜ್ಞಾನವು ನನ್ನ ತಲೆಯಲ್ಲಿ ತುಂಬಿಕೊಳ್ಳಲಿ ಎಂಬ ಪೂಜೆಯಲ್ಲಿಯ ಶೃದ್ಧೆ ಒಂದಾದರೆ, ಇನ್ನೊಂದು ಮುಖ್ಯಕಾರಣ ಪೂಜೆ ಮಾಡಿದ ಪುಸ್ತಕಗಳನ್ನು ಮರುದಿನ ಉತ್ತರ ಪೂಜೆಯ ನಂತರ ಹೊರಗೆ ತೆಗೆಯುವುದು. ಅಂದರೆ ದಸರಾ ರಜಾದ ಖಂಡೇ ನವಮಿಯ ಒಂದು ದಿನವಾದರೂ ನನ್ನ ಪಠ್ಯಪುಸ್ತಕದ ಓದಿಗೆ ಪೂರ್ಣ ವಿರಾಮ.!!!

ಡಾ.ಜಯಂತ ಕಿತ್ತೂರ

ಕಾಮೆಂಟ್‌ಗಳು

  1. Nice write up...expressed unmasked words directly from the heart. Congratulations and keep on penning.

    ಪ್ರತ್ಯುತ್ತರಅಳಿಸಿ
  2. ತಮ್ಮ ಬರಹ ಚೆನ್ನಾಗಿದೆ. ಬಾಲ್ಯವನ್ನು ಓದಿನಲ್ಲಿ ಕಳೆದಿರುತ್ತೀರಿ. ಸಂತೋಷ. ಆಟೋಟಗಳಲ್ಲಿ ತಂದೆಯ ಪ್ರೋತ್ಸಾಹ ಇಲ್ಲದಿರುವುದು ಸ್ವಲ್ಪ ಬೇಸರ. ಆದರೇ ಸಂಸ್ಕಾರ ಇರುವುದು ಒಂದು ಸಮಾಧಾನದ ಸಂಗತಿ. ನಮಸ್ಕಾರಗಳು

    ಪ್ರತ್ಯುತ್ತರಅಳಿಸಿ
  3. ನಿಮ್ಮ ಹಾಗೆ ಓದುವ ಹವ್ಯಾಸ ನಮಗೆ ಬರೆದಿರುವುದು ಒಂದು ದುಃಖ

    ಪ್ರತ್ಯುತ್ತರಅಳಿಸಿ
  4. ನಿಮ್ಮ ಹವ್ಯಾಸ ತುಂಬ ಇಷ್ಟವಾಯಿತು ಮತ್ತು ಸಂತೋಷವಾಯಿತು.

    ಪ್ರತ್ಯುತ್ತರಅಳಿಸಿ
  5. Very engaging thoughts. Anything that is ready at one go is involving & thought provoking.

    ಪ್ರತ್ಯುತ್ತರಅಳಿಸಿ
  6. ನಿಮ್ಮ ಶಿಸ್ತು, ಹವ್ಯಾಸ ಮತ್ತು ಅದರ ಮುಂದುವರಿಕೆ ಹೆಚ್ಚು ಪ್ರಶಂಸನೀಯವಾಗಿದೆ. ನಿಮ್ಮನ್ನು ಅಂತಹ ಎತ್ತರವನ್ನಾಗಿ ಮಾಡಿದೆ. ಅದನ್ನು ಮುಂದುವರಿಸಿ

    ಪ್ರತ್ಯುತ್ತರಅಳಿಸಿ
  7. You are blessed with immense knowledge by goddess Saraswati because you worshipped all books in your childhood. Keep writing and sharing sir

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ದಿಖಾವೇಪೆ ಮತ್ ಜಾವೋ ಅಕಲ್ ಲಗಾವೋ...

ಸತ್ತ ಗುರು !!!

ನನ್ನ ಇಂಜಿನಿಯರಿಂಗ್ ಬ್ರ್ಯಾಂಚ...